ಬೆಳಗಾವಿ ಪಾಲಿಕೆ ಗೊತ್ತುವಳಿ : ಸಂಘಟಣೆಗಳ ಕನ್ನಡಪರ ಸಂಕಲ್ಪ ನಿರ್ಣಾಯಕ ಹಂತ
ಶಾಸಕ ಆಸೀಫ್ ಸೇಠ ಅವರು ನಾಮ ನಿರ್ದೇಶಿತ ಸದಸ್ಯರು ಠರಾವು ಮಂಡಿಸಲು ಅವಕಾಶವಿದ್ದರೆ ಪಾಲಿಕೆಯ ಮುಂದಿನ ಸಭೆಯಲ್ಲಿ ನಾನೇ “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂದು ಠರಾವು ಮಂಡಿಸುವುದಾಗಿ ಘೋಷಿಸಿದ್ದಾರೆ.
ಬೆಳಗಾವಿ ಪಾಲಿಕೆ ಗೊತ್ತುವಳಿ : ಸಂಘಟಣೆಗಳ ಕನ್ನಡಪರ ಸಂಕಲ್ಪ ನಿರ್ಣಾಯಕ ಹಂತ
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಸರ್ವಸಾಧಾರಣಾ ಸಭೆಯಲ್ಲಿ ಕರ್ನಾಟಕ ಪರವಾದ, “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ”, “ಗಡಿ ವಿವಾದ ಪರಿಹಾರಕ್ಕೆ ಮಹಾಜನ ಆಯೋಗದ ವರದಿಯೇ ಅಂತಿಮ” ಎಂಬ ಗೊತ್ತುವಳಿಯನ್ನು ಅಂಗೀಕರಿಸಲೇಬೇಕೆಂದು ಬೆಳಗಾವಿ ಜಿಲ್ಲಾ ಕನ್ನಡಪರ ವಿವಿಧ ಸಂಘಟನೆಗಳು ಕಳೆದ ಮೂರ್ನಾಲ್ಕು ತಿಂಗಳಿಂದ ನಡೆಸುತ್ತಿರುವ ಹೋರಾಟ ತೀವ್ರಗೊಳ್ಳುತ್ತ ನಡೆದಿದ್ದು, ಸಭೆಯಲ್ಲಿ ಗೊತ್ತುವಳಿ ಪಾಸಾಗಲೇಬೇಕೆಂದು ದೃಢ ಸಂಕಲ್ಪದೊಂದಿಗೆ ಹೋರಾಟ ನಡೆಸುತ್ತಿದ್ದು, ಇಂದು ಸಂಜೆ ನಡೆದ ಸಚಿವರ ನೇತೃತ್ವದ ಸಭೆ ನಿರ್ಣಾಯಕ ಹಂತಕ್ಕೆ ತೆಗೆದುಕೊಂಡು ಹೋಗಿದೆ.

ನಿರಂತರ ಒತ್ತಾಯಿಸುತ್ತ ಬಂದ ಸಂಘಟನೆಗಳು ತೀವ್ರ ಹೋರಾಟದ ಎಚ್ಚರಿಕೆ ನೀಡಿದ್ದವು. ಇಂದಿನ ಗುರುತರ ಬೆಳವಣಿಗೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೆಟ್ಟಿ ಮಾಡಿದ ಸಂಘಟನೆ ನಾಯಕರು ಮನವಿ ಸಲ್ಲಿಸಿ ಗೊತ್ತುವಳಿ ಸ್ವೀಕರಿಸದ ಪಾಲಿಕೆಯ ನಾಡದ್ರೋಹಿ, ಕನ್ನಡ ದ್ರೋಹಿ ವರ್ತನೆ ಮೇಲೆ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದರು.
ಸ್ವಾಮೀಜಿಗಳ ಬೆಂಬಲ:
ಈ ಮಧ್ಯ ಕನ್ನಡ ಅಸ್ಮಿತೆಯ ಪರಂಪರೆ ಹೊತ್ತ ನಾಗನೂರ ರುದ್ರಾಕ್ಷಿ ಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿ ಅವರು ಹೋರಾಟಗಾರರಿಗೆ ಶಕ್ತಿ ಸಂವಧರ್ನೆ ಒದಗಿಸಿದರು. ಶ್ರೀ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಜಿಲ್ಲೆಯ 20ಕ್ಕೂ ಅಧಿಕ ಸಂಖ್ಯೆಯ ಕನ್ನಡಪರ ಸಂಘಟನೆಗಳು ಪಾಲಿಕೆ ವಿರುದ್ದ ಹೋರಾಟ ನಡೆಸುವ ಬಗ್ಗೆ ಸಭೆ ನಡೆಸಿ ಗಂಭೀರ ನಿರ್ಧಾರ ತೆಗೆದುಕೊಳ್ಳಲಾಯಿತು. ಸರ್ವೋಚ್ಛ ನ್ಯಾಯಾಲಯದ ನೆಪ ಹೇಳಿ ನುಚಿಕೊಂಡರೆ ಬಿಡುವುದಿಲ್ಲ. ವ್ಯಾಪಕ ಚಳವಳಿ ನಡೆಸಲಾಗುವುದು. ಬೆಳಗಾವಿಯನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳಲು ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಅಲ್ಲಮಪ್ರಭು ಸ್ವಾಮಿಜಿ ತುಂಬಾ ಗಂಭೀರವಾದ ಹೇಳಿಕೆ ನೀಡಿ, ಸಂಘಟನೆಗಳಿಗೆ ಶಕ್ತಿ ತುಂಬಿದ್ದಾರೆ. ಈ ಮಧ್ಯ ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಗೊತ್ತುವಳಿ ಸ್ವೀಕರಿಸಲು ಪಾಲಿಕೆಗೆ ಗಡುವ ನೀಡಿ ಎಚ್ಚರಿಸಿದ್ದಾರೆ.
ಗಂಭೀರತೆ ಅರಿತ ಸಚಿವರು – ಜಿಲ್ಲಾ ಆಡಳಿತ:
ಗೊತ್ತುವಳಿ ಸ್ವೀಕರಿಸಲು ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಹೋರಾಟದ ಗಂಭೀರತೆಯನ್ನು ಅರಿತ ಸಚಿವ ಸತೀಶ ಜಾರಕಿಹೊಳಿ ಅವರು ಶಾಸಕ ಆಸೀಫ್ ಸೇಠ, ಜಿಲ್ಲಾಧಿಕಾರಿ ಮೊಹಮ್ಮದ ರೋಷ್, ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ, ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಡಾ. ಕೆ. ರಾಮರಾಜನ್, ಪಾಲಿಕೆ ಆಯುಕ್ತ ಕಾರ್ತಿಕ ಎಂ ಮತ್ತು ಕನ್ನಡಪರ ಸಂಘಟನೆಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಗೊತ್ತುವಳಿ ಹಿನ್ನಲೆಯಲ್ಲಿ ಆದ ಬೆಳವಣಿಗೆ ಚರ್ಚೆ ನಡೆದಾಗ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ವಿಷಯ ಸರ್ಕಾರದ ಮಟ್ಟಿಗೆ ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಪಾಲಿಕೆ ಮಟ್ಟದಲ್ಲಿಯೇ ಬಗೆಹರಿಸಬಹುದು ಎಂದು ಸೂಚಿಸಿದರು. ವಿಷಯ ಅರಿತ ಶಾಸಕ ಆಸೀಫ್ ಸೇಠ ಅವರು ನಾಮ ನಿರ್ದೇಶಿತ ಸದಸ್ಯರು ಠರಾವು ಮಂಡಿಸಲು ಅವಕಾಶವಿದ್ದರೆ ಪಾಲಿಕೆಯ ಮುಂದಿನ ಸಭೆಯಲ್ಲಿ ನಾನೇ “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂದು ಠರಾವು ಮಂಡಿಸುವುದಾಗಿ ಘೋಷಿಸಿದ್ದಾರೆ.
ಶಾಸಕರ ಬೆಳಗಾವಿಪರ ಗಟ್ಟಿ ನಿರ್ಧಾರದಿಂದ ಕನ್ನಡಪರ ಸಂಘಟನೆಗಳು ಸದ್ಯ ನಿರಾಳವಾಗಿದ್ದು, ಮುಂದಿನ ಬೆಳವಣಿಗೆ ಕಾಯ್ದು ನೋಡಬೇಕಾಗಿದೆ.
ಕನ್ನಡಕ್ಕಿಂತ ರಾಜಕೀಯ ಅಸ್ತಿತ್ವ ಮುಖ್ಯ:
ಬೆಳಗಾವಿ ಪಾಲಿಕೆಯ ಹಿಂದಿನ ಸಭೆಯಲ್ಲಿ ಸದಸ್ಯ ರಮೇಶ ಸೊಂಟಕ್ಕಿ ಅವರು ಠರಾವು ಮಂಡಿಸಲು ಮುಂದಾದಗ ಮಹಾಪೌರರು ತಡೆದು ವಿಷಯ ಸರ್ವೋಚ್ಛ ನ್ಯಾಯಾಲಯದಲ್ಲಿದೆ ಎಂದು ಸೂಚಿಸಿ, ಸರ್ಕಾರಕ್ಕೆ ಪತ್ರ ಬರೆಯುವ ಬಗ್ಗೆ ತಿಳಿಸಿ ನಿಲ್ಲಿಸಿದರು. ಪಾಲಿಕೆಯಲ್ಲಿರುವ ಬಹುಸಂಖ್ಯಾತ ಕನ್ನಡದ ಸದಸ್ಯರೇ ಇದ್ದು ಅವರಿಗೂ ಗೊತ್ತುವಳಿ ಪಾಸು ಮಾಡುವ ಆಸಕ್ತಿ ಇದೆ. ಆದರೆ, ಚುನಾವಣೆಯ ಸಂದರ್ಭದಲ್ಲಿ ಈ ಬೆಳವಣಿಗೆಯಿಂದ ಮತ ಕಳೆದು ಹೋದಾವು ಎಂಬ ಆತಂಕ ತುಂಬಲಾಗಿದೆ. ನಿಮ್ಮ ರಾಜಕೀಯ ಬೆಳವಣಿಗೆಯ ಮೇಲೆ ಯಾವುದೇ ಪ್ರತಿಕೂಲ ಬೀರುವುದಿಲ್ಲ, ಗಟ್ಟಿ ನಿರ್ಧಾರ ತೆಗೆದುಕೊಳ್ಳುವಂತೆ ಕನ್ನಡಪರ ಸಂಘಟನೆಗಳು ಧೈರ್ಯ ತುಂಬುತ್ತ ಬಂದಿವೆ. ಕನ್ನಡದ ಈ ಸದಸ್ಯರು ಮುಂಬರುವ ಸಭೆಯಲ್ಲಿ ರಾಜಕೀಯ ಬದಿಗಿಟ್ಟು ದೊರೆತ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುತ್ತಾರೆ ಎಂಬ ವಿಶ್ವಾಸವನ್ನು ಕನ್ನಡಪರ ಸಂಘಟನೆಗಳು ಆಶಾಭಾವ ವ್ಯಕ್ತಪಡಿಸಿವೆ.
ಸೂಪರ್ ಸೀಡ್ :
ಗೊತ್ತುವಳಿ ಪಾಸ್ ಒತ್ತಾಯವನ್ನು ಅರಿತ ಎಂಈಎಸ್ ಕಾರ್ಯಕರ್ತರು ತಳಮಳಕ್ಕೆ ಒಳಗಾಗಿ, ಪಾಲಿಕೆಯನ್ನು ಸರ್ಕಾರ ಸೂಪರ್ ಸೀಡ್ ಮಾಡುತ್ತದೆ ಎಂದು ಹೇಳಿಕೆ ನೀಡಿ ತೃಪ್ತಿ ಪಟ್ಟುಕೊಂಡಿದ್ದಾರೆ.
**
ಈ ಲೇಖನ ಹಂಚಿಕೊಳ್ಳಿ