ಯೋಧರಿಗೆ ರಕ್ಷಾ ಬಂಧನ : ಜೈನ ಹೆರಿಟೇಜ್ ಸ್ಕೂಲ್ ಮಕ್ಕಳ ರಾಷ್ಟ್ರ ಪ್ರೇಮ
ಬೆಳಗಾವಿಯ ಪ್ರತಿಷ್ಠಿತ ಜೆಜಿಐ ಸಂಸ್ಥೆಯ ಜೈನ ಹೆರಿಟೇಜ್ ಸ್ಕೂಲ್ ಸ್ಕೌಡ್ಸ್ ಮತ್ತು ಗೌಡ್ಸ್ ಮಕ್ಕಳು ಒಳಗೊಂಡು ಶಾಲೆಯ ಇತರೆ ಮಕ್ಕಳು ಕಳೆದ ಮೂರ್ನಾಲ್ಕು ವರ್ಷದಿಂದ ರಕ್ಷಾ ಬಂಧನದ ಹೊಸ ಪ್ರಯೋಗದಲ್ಲಿ ತೊಡಗಿದ್ದು ರಾಷ್ಟ್ರದ ಗಮನ ಸೆಳೆದಿದ್ದಾರೆ.
ಅಸ್ಮಿತೆ ವರದಿ, ಅ.೨೧: ʼರಾಖಿʼ ಎಂದರೆ ರಕ್ಷಣೆ, ಪ್ರೀತಿ, ಗೌರವ, ವಿಶ್ವಾಸದ ಸಂಕೇತವಾದ ಪವಿತ್ರ ದಾರ. ಇಂದು ʼರಾಖಿʼ ಕೇವಲ ಸಹೋದರನಿಗೆ ಮಾತ್ರವಲ್ಲ, ದೇಶದ ಸಂರಕ್ಷಣೆಯಲ್ಲಿ ಗಡಿ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸುತ್ತಿರುವ ಯೋಧರಿಗೆ, ಗುರುಗಳಿಗೆ ಮತ್ತು ಸಮಾಜ ಸೇವಕರಿಗೆ ಕಟ್ಟುವುದರ ಮೂಲಕ ರಾಷ್ಟ್ರ ಪ್ರೇಮದ ವರೆಗೆ ವಿಸ್ತರಿಸಿಕೊಂಡಿದೆ. ಆ ಮೂಲಕ ಪರಸ್ಪರ ಗೌರವ, ಬಾಂಧವ್ಯ, ಸಾಮಾಜಿಕ ಹಾಗೂ ರಾಷ್ಟ್ರೀಯ ಮೌಲ್ಯಗಳ ಅನುಸರಣೆಗೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಬೆಳಗಾವಿಯ ಪ್ರತಿಷ್ಠಿತ ಜೆಜಿಐ ಸಂಸ್ಥೆಯ ಜೈನ ಹೆರಿಟೇಜ್ ಸ್ಕೂಲ್ ಸ್ಕೌಡ್ಸ್ ಮತ್ತು ಗೌಡ್ಸ್ ಮಕ್ಕಳು ಒಳಗೊಂಡು ಶಾಲೆಯ ಇತರೆ ಮಕ್ಕಳು ಕಳೆದ ಮೂರ್ನಾಲ್ಕು ವರ್ಷದಿಂದ ರಕ್ಷಾ ಬಂಧನದ ಹೊಸ ಪ್ರಯೋಗದಲ್ಲಿ ತೊಡಗಿದ್ದು ರಾಷ್ಟ್ರದ ಗಮನ ಸೆಳೆದಿದ್ದಾರೆ.

ಸ್ವತಃ ತಯಾರಿಕೆ :
ಅಕ್ಕಿ, ಗೋಧಿ, ಗೋಡಂಬಿ,ಏಲಕ್ಕಿ, ಉಲನ್ ಸೇರಿದಂತೆ ಇತರೆ ಧಾನ್ಯಗಳು, ಬಣ್ಣದ ದಾರ ಒಳಗೊಂಡದಂತೆ ವಿವಿಧ ಬಗೆಯ ಸೂಕ್ಷ್ಮ ವಸ್ತುಗಳ ಬಳಕೆ ಮಾಡಿ ಸ್ವತಃ ತಾವೇ ಸುಂದರವಾದ ವೈವಿದ್ಯಮ ಸುಮಾರು ೫ ಸಾವಿರಕ್ಕೂ ಅಧಿಕ ಸಂಖ್ಯೆಯ ರಾಖಿಗಳನ್ನು ಸಿದ್ಧಪಡಿಸಿ ದೇಶದ ಗಡಿ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸುತ್ತಿರುವ ಯೋಧರಿಗೆ ಅಂಚೆ ಮೂಲಕ ಕಳುಹಿಸಿಕೊಡುವುದರ ಮೂಲಕ ಯೋಧರಿಗೆ ಗೌರವ ಸಂದೇಶ ರವಾನಿಸಿದ್ದಾರೆ.
ಗ್ರೇಟಿಂಗ್ಸ್ :
ಸುಂದರವಾದ ವೈವಿದ್ಯಮಯ ರಾಖಿಗಳ ಜೊತೆಗೆ ಮಕ್ಕಳು ತಮ್ಮ ಮುದ್ದಾದ ಅಕ್ಷರ, ಸುಂದರವಾದ ಚಿತ್ರಗಳ ಮೂಲಕ ಕಾಗದದ ಗ್ರೇಟಿಂಗ್ಸ್ ತಯಾರಿಸಿದ್ದಾರೆ. ರಾಖಿಗಳೊಂದಿಗೆ ಅವುಗಳನ್ನೂ ಸೇರಿಸಿ ತಮ್ಮ ಪ್ರೀತಿ, ಮಮಕಾರದ ಸಂದೇಶ ರವಾನಿಸಿದ್ದಾರೆ.
ವಿವಿಧ ಸೈನಿಕ ಕೇಂದ್ರಗಳಿಗೆ ರವಾನೆ:
ಶಾಲಾ ಮಕ್ಕಳು ಸಿದ್ಧಪಡಿಸಿ ಕಳುಹಿಸುವ ರಾಖಿ ಯೋಧರಿಗೆ ಮಾನಸಿಕ ಬಲ, ಪ್ರೇರಣೆ ಮತ್ತು ಕುಟುಂಬದ ಆತ್ಮೀಯತೆಯ ಅನುಭವಕ್ಕೆ ಕಾರಣವಾಗಿದೆ. ಕಳೆದ ಮೂರು ವರ್ಷಗಳಿಂದ ದೆಹಲಿ, ಬೆಂಗಳೂರು, ಕಾರವಾರ, ಮಧ್ಯಪ್ರದೇಶದ ಡೋಂಗ್ರಾ ತರಬೇತಿ ಕೇಂದ್ರ, ಬೆಳಗಾವಿ ಸೇರಿದಂತೆ ವಿವಿಧೆಡೆ ರಕ್ಷಾ ಬಂಧನದ ಒಂದುವಾರ ಮುಂಚೆ ಅಂಚೆ ಮೂಲಕ ರವಾನಿಸಲಾಗಿದೆ.

ರಾಷ್ಟ್ರಪತಿಗೆ ರಾಖಿ ಕಟ್ಟಿದ ಮಕ್ಕಳು:
ಕಳೆದ ಐದಾರು ವರ್ಷಗಳಿಂದ ಅತ್ಯಂತ ಸಂಭ್ರಮದಿಂದ ರಕ್ಷಾ ಬಂಧನ ಆಚರಿಸುತ್ತಿರುವ ಮಕ್ಕಳು ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದೆಹಲಿಗೆ ತೆರಳಿ ರಾಖಿಕಟ್ಟಿ ಬಂದಿದ್ದಾರೆ. ಈ ಸಲವೂ ದೆಹಲಿಗೆ ತೆರಳುವ ಮೂಲಕ ಸಾಂಸ್ಕೃತಿಕ ವಿಶೇಷತೆ ಸಾಕ್ಷಿಕರಿಸುವ ಯೋಜನೆ ಹೊಂದಿದ್ದಾರೆ. ಜೊತೆಗೆ ಯೋಧರ ಬಳಿ ತೆರಳಿ ರಾಖಿ ಕಟ್ಟುವುದರ ಮೂಲಕ ಪ್ರೀತಿ ಹಂಚಿಕೊಂಡಿದ್ದಾರೆ.
ಆಡಳಿತ ಮಂಡಳಿಯ ಪ್ರೋತ್ಸಾಹ :
ಶಾಲಾ ಮಕ್ಕಳಲ್ಲಿ ಶಿಸ್ತು, ಪರಸ್ಪರ ಗೌರವ, ಆದರ್ಶ, ಸಾಮಾಜಿಕ ಮೌಲ್ಯ, ಮಾನವೀಯ ಕಳಕಳಿ, ನಾಡಪ್ರೇಮ, ದೇಶಾಭಿಮಾನದ ಬೆಳೆಸುವ ನಿಟ್ಟಿನಲ್ಲಿ ಜೆಜಿಐ ಸಂಸ್ಥೆಯ ಆಡಳಿತ ಮಂಡಳಿ ವಿಶೇಷ ಆಸಕ್ತಿ ವಹಿಸುತ್ತ ಬಂದಿದೆ. ಆಮೂಲಕ ಪೂರಕವಾದ ವೈವಿಧ್ಯಮಯ ರಚನಾತ್ಮಕ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ಆಯೋಜಿಸುತ್ತಿದೆ. ಸಂಸ್ಥೆಯ ನಿರ್ದೇಶಕಿ ಶ್ರದ್ಧಾ ಕೆ. ಅವರ ನಿರ್ದೇಶನದಲ್ಲಿ ಪ್ರಾಚಾರ್ಯ ರೋಹಿಣಿ ಕೆ.ಬಿ. , ಸ್ಕೌಟ್ಸ್ ಮತ್ತು ಗೈಡ್ಸ್ ನಿರ್ದೇಶಕಿ ಪಲ್ಲವಿ ನಾಡಕರ್ಣಿ ಸೇರಿದಂತೆ ಶಾಲೆಯ ಇತರೆ ಸಿಬ್ಬಂದಿ ಮಕ್ಕಳ ಶ್ರೇಯೋಭಿವೃದ್ಧಗಾಗಿ ಶ್ರಮಿಸಿ ಮಕ್ಕಳ, ಪಾಲಕ ಪ್ರೀತಿಗೆ ಪಾತ್ರರಾಗಿದ್ದಾರೆ.

ಸಾದ್ವಿ ದೇವರಭಾವಿ:
ಅಸ್ಮಿತೆಗೆ ತಮ್ಮ ಅನುಭವ ಹಂಚಿಕೊಂಡ ವಿದ್ಯಾರ್ಥಿನಿ ಸಾದ್ವಿ ದೇವರಭಾವಿ, "ರಕ್ಷಾ ಬಂಧನ ಎಲ್ಲರ ಪ್ರೀತಿ, ವಿಶ್ವಾಸ, ಗೌರವ ಹಾಗೂ ರಕ್ಷಣೆಯ ಜವಬ್ದಾರಿಯ ಸಂಕೇತವಾಗಿದೆ. ಸ್ವತಃ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಿರುವುದು ಸಂತಸ ತಂದಿದೆ' ಎಂದಿದ್ದಾರೆ.
ಸಿರಿ:
ಇನ್ನೋರ್ವ ವಿದ್ಯಾರ್ಥಿನಿ ಸಿರಿ, "ಧೈರ್ಯ, ಸ್ಥೈರ್ಯ ಮತ್ತು ಬಲಿದಾನ ಮಾದರಿಯಾದ ಯೋಧರಿಗೆ ನಾವು ರಚಿಸಿದ ರಾಖಿ ಚಿಕ್ಕದಾದ ಸಮರ್ಪಣೆ" ಎಂದಿದ್ದಾರೆ.
ತನಿಷ್ಕಾ ನಾಯಕ:
ತನಿಷ್ಕಾ ನಾಯಕ್, "ಎಲಕ್ಕಿ, ಅಕ್ಕಿ, ಉಲನ್, ಗೋಡಂಬಿ ಮೊದಲಾದ ವಸ್ತುಗಳಿಂದ ರಾಖಿಗಳನ್ನು ತಯಾರಿಸಿದ್ದೇವೆ" ಎಂದು ತಿಳಿಸಿದ್ದಾರೆ.
ಅರಣಿ ಗೋಡ್ಕಿಂಡಿ:
ಅರಣಿ ಗೋಡ್ಕಿಂಡಿ, "ಯೋಧರಿಗಾಗಿ ನಾವೆಲ್ಲರೂ ಪ್ರೀತಿಯಿಂದ ತಯಾರಿಸಿದ ರಾಖಿಗಳು ರಕ್ಷಣೆಯ ಸಂಕೇತವಾಗಿವೆ" ಎಂದಿದ್ದಾರೆ.

ಪಲ್ಲವಿ ನಾಡಕರ್ಣಿ:
ಸ್ಕೂಲ್ ನ ಸ್ಕೌಟ್ಸ್ ಮತ್ತು ಗೈಡ್ಸ್ ನಿರ್ದೇಶಕಿ, ಪಲ್ಲವಿ ನಾಡಕರ್ಣಿ, "ನಮ್ಮ ಶಾಲಾ ಮಕ್ಕಳು ಕಳೆದ ಮೂರು ವರ್ಷದಿಂದ ಯೋಧರಿಗಾಗಿ ರಾಖಿ ತಯಾರಿಸಿ ಕಟ್ಟುತ್ತಿದ್ದಾರೆ. ದೇಶದ ವಿವಿಧ ಸ್ಥಳಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಯೋಧರಿಗೆ, ಪ್ರತಿಷ್ಠಿತ ವ್ಯಕ್ತಿಗಳಿಗೆ ರಾಖಿ ಕಟ್ಟಲು ಅವಕಾಶ ಕಲ್ಪಿಸಲಾಗಿದೆ" ಎಂದು ತಿಳಿಸಿದರು.
ರೋಹಿಣಿ ಕೆ.ಬಿ.:

ಪ್ರಾಚಾರ್ಯ ರೋಹಿಣಿ ಕೆ.ಬಿ., "ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ವಿಶೇಷ ಕಾಳಜಿ ವಹಿಸಿರುವ ಶಾಲೆ ದೇಶ ಪ್ರೇಮ ಹಾಗೂ ಸಾಮಾಜಿಕ ಮೌಲ್ಯಗಳ ಅರಿವು ಮೂಡಿಸುವಲ್ಲಿ ಈ ಬಗೆಯ ಕಾರ್ಯಕ್ರಮ ಆಯೋಜಿಸಲಾಗಿದೆ" ಎಂದು ತಿಳಿಸಿದ್ದಾರೆ
****
ಈ ಲೇಖನ ಹಂಚಿಕೊಳ್ಳಿ