ಗ್ರಂಥಾಲಯ ಅನುಷ್ಠಾನ ಸಮಾರಂಭ : ಮನೆಯಲ್ಲೊಂದು ಗ್ರಂಥಾಲಯ ಗೌರವಕ್ಕೆ ಕಾರಣ : ಡಾ. ಮಾನಸ
ಪುಸ್ತಕ ಓದುವ ಅಭಿರುಚಿ ಹೆಚ್ಚಿಸಲು ಪ್ರತಿ ಮನೆಯಲ್ಲೂ ಗ್ರಂಥಾಲಯ ಸ್ಥಾಪಿಸುವ ಯೋಜನೆಯ ಅನುಷ್ಠಾನಕ್ಕೆ ಜಿಲ್ಲಾ ಜಾಗೃತಿ ಸಮಿತಿಗಳ ಮೂಲಕ ಪುಸ್ತಕ ಪ್ರಾಧಿಕಾರ ಮುಂದಾಗಿದೆ. ಈಗಾಗಲೇ ಹಳ್ಳಿಗಳಲ್ಲೂ ಊರಾಚೆಯ ಗುಡಿಸಲುಗಳಲ್ಲೂ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಅಸ್ಮಿತೆ ವರದಿ, ಅ.23 : ಪ್ರತಿ ಮನೆಯಲ್ಲೂ ಪೂಜಾ ಕೊಠಡಿ ಇವೆ. ಅದೇ ರೀತಿ ಕಡ್ಡಾಯವಾಗಿ ಪ್ರತ್ಯೇಕ ಗ್ರಂಥಾಲಯ ಕೊಠಡಿ ಇರುವ ಹಾಗೆ ಜಾಗೃತಿ ಮೂಡಿಸುವುದೇ ಮನೆಗೊಂದು ಗ್ರಂಥಾಲಯ ಅನುಷ್ಠಾನ ಯೋಜನೆಯ ಉದ್ದೇಶವಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ಮಾನಸ ಹೇಳಿದ್ದಾರೆ.
ಬೆಳಗಾವಿಯ ರಾಮತೀರ್ಥ ನಗರದ ನಿವಾಸಿ ಹಿರಿಯ ಸಾಹಿತಿ ಶಿವಯೋಗಿ ಕುಸುಗಲ್ಲ ಅವರ ಮನೆಯಲ್ಲಿ ಇಂದು ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಹಮ್ಮಿಕೊಂಡಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮಲ್ಲಿ ಎರಡು ರೂಪಾಯಿಗಳಿದ್ದರೆ ಒಂದು ರೂಪಾಯಿ ಆಹಾರಕ್ಕಾಗಿ ಬಳಸಿ, ಮತ್ತೊಂದು ರೂಪಾಯಿ ಮಾನಸಿಕ ಪರಿವರ್ತನೆಗಾಗಿ ಜ್ಞಾನ ಒದಗಿಸುವ ಪುಸ್ತಕ ಕೊಳ್ಳಲು ಬಳಸಿ ಎಂದಿದ್ದಾರೆ. ಪುಸ್ತಕಗಳೆಂದರೆ ಜ್ಞಾನದ ಕಟ್ಟು, ಅರಿವಿನ ಹೊತ್ತಿಗೆ. ಇಂತಹ ಪುಸ್ತಕಗಳ ಗ್ರಂಥಾಲಯ ಹೊಂದಿರುವ ವ್ಯಕ್ತಿ ಮತ್ತು ಮನೆಗೆ ಗೌರವ ತರುವ ಕೆಲಸವೂ ನಡೆಯಬೇಕಿದೆ. ಪುಸ್ತಕ ಓದುವ ಅಭಿರುಚಿ ಹೆಚ್ಚಿಸಲು ಪ್ರತಿ ಮನೆಯಲ್ಲೂ ಗ್ರಂಥಾಲಯ ಸ್ಥಾಪಿಸುವ ಯೋಜನೆಯ ಅನುಷ್ಠಾನಕ್ಕೆ ಜಿಲ್ಲಾ ಜಾಗೃತಿ ಸಮಿತಿಗಳ ಮೂಲಕ ಪುಸ್ತಕ ಪ್ರಾಧಿಕಾರ ಮುಂದಾಗಿದೆ. ಈಗಾಗಲೇ ಹಳ್ಳಿಗಳಲ್ಲೂ ಊರಾಚೆಯ ಗುಡಿಸಲುಗಳಲ್ಲೂ ಈ ಯೋಜನೆಯನ್ನು ಅನುಷ್ಠಾನಗೊಳಿಸಿದ್ದೇವೆ ಎಂದು ಡಾ. ಮಾನಸ ವಿವರಿಸಿದರು.

ಶಿವಯೋಗಿ ಕುಸುಗಲ್ ಅವರ ಕವಿ ಕೃತಿಗಳ ಕುರಿತು ಮಾತನಾಡಿದ ಪ್ರಾಧ್ಯಾಪಕಿ ಡಾ. ನಿರ್ಮಲಾ ಬಟ್ಟಲ "ಶಿವಯೋಗಿ ಕುಸುಗಲ್ ಅವರು ಬೆಳಗಾವಿಯ ಸಾಂಸ್ಕೃತಿಕ ಲೋಕದಲ್ಲಿ ವಿನಿತ್ವದಿಂದ ಗುರುತಿಸಿಕೊಂಡವರು. ಬರಹಗಾರರ ಸಾಹಿತ್ಯ ಕೃಷಿಯನ್ನು ಪ್ರೀತಿಸಿ ಗೌರವಿಸುವ ಅವರು ನಿರಂತರ ಬರವಣಿಗೆಯಲ್ಲಿ ತೊಡಗಿಸಿಕೊಂಡವರು. ಕುಸುಗಲ್ ಅವರು ತಮ್ಮ ಮನೆಯಲ್ಲಿ ಉತ್ತಮ ಕೃತಿಗಳ ಉತ್ಕೃಷ್ಟ ಗ್ರಂಥಾಲಯ ನಿರ್ಮಾಣ ಮಾಡುವುದರ ಜೊತೆಗೆ ತಮ್ಮ ನಾಲ್ಕು ಜನ ಹೆಣ್ಣುಮಕ್ಕಳ ಭವಿಷ್ಯವನ್ನು ಉತ್ತಮ ಶಿಕ್ಷಣದ ಮೂಲಕ ಉಜ್ವಲ ಗೊಳಿಸಿದವರು. ಅವರ ಮನೆಯಲ್ಲಿ ಪುಸ್ತಕ ಪ್ರಾಧಿಕಾರ ಪ್ರಸ್ತುತ ಯೋಜನೆಯನ್ನು ಅನುಷ್ಠಾನಗೊಳಿಸಿರುವುದು ಓದುಗರಿಗೆ ಒಂದು ಮಾದರಿಯಾಗಿದೆ" ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಡಾ. ಕುಶಾಲ್ ಬರಗೂರು ಆಶಯ ನುಡಿಗಳನ್ನಾಡಿದರು. ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ಜಿ. ರಾಮಯ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಯಲ್ಲಪ್ಪ ಹಿಮ್ಮಡಿ ಅಧ್ಯಕ್ಷತೆ ವಹಿಸಿದ್ದರು .
ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರಾದ ಜಗದೀಶ ಹೊಸಮನಿ, ಬಿ, ವೈ. ನಾಯಕ, ಸ.ರಾ. ಸುಳಕೂಡೆ, ದೀಪ್ತಿ ಎಲಿಗಾರ, ವೀರಣ್ಣ ಕೆಂಚಕ್ಕನವರ, ಬಸಪ್ಪ ನಾಯ್ಕರ್, ಶಿವಾನಂದ ಮಸಳಿ, ಅಕ್ಕಮಹಾದೇವಿ ತೆಗ್ಗಿ, ಹೇಮಾ ಸೋನಳ್ಳಿ, ದೇಮಣ್ಣ ಸೊಗಲದ, ಸಾಂವಕ್ಕ ಸೊಗಲದ, ಗಂಗಾದೇವಿ ಕುಸುಗಲ್, ಪಲ್ಲವಿ ಕುಸುಗಲ್, ಸಂಗೀತಾ ಕುಸುಗಲ್, ಮಂಜುಳಾ ಕುಸುಗಲ್, ರಿತೇಶ ಹೆಜ್ಜೆ, ರವಿ ಹಿರೇಮಠ, ಆನಂದ ರಣಗಟ್ಟಿಮಠ ಮತ್ತಿತರರು ಭಾಗವಹಿಸಿದ್ದರು.
ಐಶ್ವರ್ಯ ಕಾಂಬಳೆ ನಾಡಗೀತೆ ಹಾಡಿದರು. ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ಡಾ. ಸಂತೋಷ ನಾಯಿಕ ಸ್ವಾಗತಿಸಿದರು, ಡಾ. ಕವಿತಾ ಕುಸುಗಲ್ ವಂದಿಸಿದರು, ವಿನಾಯಕ ನಂದಿ ಕಾರ್ಯಕ್ರಮ ನಿರೂಪಿಸಿದರು.
***
ಈ ಲೇಖನ ಹಂಚಿಕೊಳ್ಳಿ