ಮೂರು ದಿನಗಳ RSS ಬೈಟಕ್ ಮುಕ್ತಾಯ: ಶ್ರೀರಾಮ ಜನ್ಮಭೂಮಿ ಮಂದಿರದ ದಾನ ಪೆಟ್ಟಿಗೆಯ ಕಾಣಿಕೆಯ ಅಕ್ರಮಕ್ಕೆ ಖೇದ
ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ತೀರ್ಥಕ್ಷೇತ್ರ ನ್ಯಾಸ ಖಚಿತಪಡಿಸಿಕೊಳ್ಳಬೇಕು. ಇದರಿಂದ ಸಮಸ್ತ ರಾಮಭಕ್ತರು ರಾಮ ಮಂದಿರದ ಮೇಲೆ ಹೊಂದಿರುವ ಶ್ರದ್ಧೆ ಮತ್ತು ಆಳವಾದ ನಂಬಿಕೆಗೆ ಧಕ್ಕೆಯಾಗಬಾರದು ಎಂದು ಸೂಚನೆ
ಅಸ್ಮಿತೆ ವರದಿ, ಜು.12 : ಬೆಳಗಾವಿಯ ಆನಗೋಳದಲ್ಲಿನ ಸಂತ ಮೀರಾಶಾಲೆಯ ಜನಕಲ್ಯಾಣ ಸಭಾಂಗಣದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಖಿಲ ಭಾರತೀಯ ಪ್ರಾಂತ ಪ್ರಚಾರ ವಾರ್ಷಿಕ ಸಭೆ ಇಂದು ಕೊನೆಗೊಂಡಿದೆ ಎಂದು ಸಂಘದ ಅಖಿಲ ಭಾರತೀಯ ಪ್ರಚಾರ ಸಮಿತಿ ಪ್ರಮುಖ ಸುನೀಲ್ ಅಂಬೇಕರ್ ಹಾಗೂ ಉತ್ತರ ಕರ್ನಾಟಕ ಪ್ರಚಾರ ಸಮಿತಿ ಪ್ರಮುಖ ಕೃಷ್ಣಾ ಜೋಶಿ ಜಂಟಿ ಸುದ್ದಿಗೋಷ್ಠಿಯಲ್ಲಿ ಇಂದು ತಿಳಿಸಿದರು.
ಮೂರು ದಿನಗಳ ಸಭೆಯಲ್ಲಿ ಆರ್. ಎಸ್. ಎಸ್. ಸರ ಸಂಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯ ನಿರ್ವಾಹಕ ದತ್ತಾತ್ರೇಯ ಹೊಸಬಾಳೆ ಸೇರಿದಂತೆ 226 ಕಾರ್ಯಕರ್ತರು ಉಪಸ್ಥಿತರಿದ್ದರು.

ಶ್ರೀರಾಮ ಜನ್ಮಭೂಮಿ ಮಂದಿರದ ದಾನ ಪೆಟ್ಟಿಗೆಯ ಕಾಣಿಕೆಯ ಎಣಿಕೆಯಲ್ಲಿ ನಡೆದಿರುವ ಅಕ್ರಮದ ಘಟನೆಯ ಬಗ್ಗೆ ಖೇದ ವ್ಯಕ್ತಪಡೆಸಲಾಗಿದ್ದು, ತೀರ್ಥಕ್ಷೇತ್ರ ನ್ಯಾಸದ ಟ್ರಸ್ಟ್ ಮನವಿಯ ಮೇರೆಗೆ ನಡೆಯುತ್ತಿರುವ ಎಸ್. ಐ. ಟಿ ಮತ್ತು ಪೊಲೀಸ್ ತನಿಖೆ ನಿರ್ಣಾಯಕ ಹಂತ ತಲುಪಲಿದೆ ಎಂಬ ವಿಶ್ವಾಸವನ್ನು ಸಭೆಯಲ್ಲಿ ವ್ಯಕ್ತಪಡೆಸಲಾಗಿದೆ. ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ತೀರ್ಥಕ್ಷೇತ್ರ ನ್ಯಾಸ ಖಚಿತಪಡಿಸಿಕೊಳ್ಳಬೇಕು. ಇದರಿಂದ ಸಮಸ್ತ ರಾಮಭಕ್ತರು ರಾಮ ಮಂದಿರದ ಮೇಲೆ ಹೊಂದಿರುವ ಶ್ರದ್ಧೆ ಮತ್ತು ಆಳವಾದ ನಂಬಿಕೆಗೆ ಧಕ್ಕೆಯಾಗಬಾರದೆಂದು ಸೂಚಿಸಲಾಗಿದೆ ಎಂಬ ಮಾಹಿತಿ ಸುನಿಲ್ ಅಂಬೇಕರ್ ಮತ್ತು ಕೃಷ್ಣಾ ಜೋಶಿ ತಿಳಿಸಿದರು.
ಮಾರ್ಚ್ 2026 ರ ನಂತರ ಸಂಘದ ವಿವಿಧ ಸ್ತರಗಳಲ್ಲಿ ನಡೆದ ಪ್ರಶಿಕ್ಷಣ ವರ್ಗಗಳ ಬಗ್ಗೆ ವಿಶ್ಲೇಷಣೆ ನಡೆಸಲಾಯಿತು. ಪ್ರಸಕ್ತ ವರ್ಷಷ ದೇಶಾದ್ಯಂತ 83 ಸಂಘ ಶಿಕ್ಷಾ ವರ್ಗ ಮತ್ತು 12 ಕಾರ್ಯಕರ್ತ ವಿಕಾಶ ವರ್ಗಗಳು ಪೂರ್ಣಗೊಂಡಿವೆ. ಇದರಲ್ಲಿ 18 ಸಾವಿರದ 842 ಸ್ವಯಂ ಸೇವಕರು ತರಬೇತಿ ಪಡೆದಿದ್ದಾರೆ. ತರಬೇತಿಯಲ್ಲಿ ಶಾಖಾ ಸಂಚಲನೆ, ಸಂಘದ ಕಾರ್ಯ ಪದ್ಧತಿ, ಗ್ರಾಮ ವಿಕಾಶ, ಕುಟುಂಬ ಪ್ರಬೋಧನೆ, ವಿಪತ್ತು ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು ಎಂದು ತಿಳಿಸಿದರು.
ಸಭೆಯಲ್ಲಿ ಶಾಖೆಗಳ ಹಂತದಲ್ಲಿ ಕಾರ್ಯಯೋಜನೆಯ ಅನುಷ್ಠಾನದ, ಸೆಪ್ಟಂಬರ್ ತಿಂಗಳಲ್ಲಿ ಗರಿಷ್ಠ ಶಾಖಾ ವಿಸ್ತರಣೆ, ಶತಾಬ್ದಿ ವರ್ಷದ ಅಂಗವಾಗಿ ನಡೆದ ಕಾರ್ಯಕ್ರಮಗಳು ಕುರಿತು ಚರ್ಚಿಸಲಾಯಿತು. ಶತಾಬ್ದಿ ಕಾರ್ಯಕ್ರಮಗಳ ಸಂದರ್ಭದಲ್ಲಿ ಸಂಪರ್ಕಕ್ಕೆ ಬಂದ ಜನರಿಗೆ ಸಾಮಾಜಿಕ ಕಾರ್ಯ ಹಾಗೂ ಪಂಚ ಪರಿವರ್ತನೆಯ ವಿಷಯಗಳಲ್ಲಿ ಸಕ್ರಿಯಗೊಳಿಸುವ ಬಗ್ಗೆ ಮತ್ತು ಸಂಘದ ಸರಸಂಚಾಲಕರ 2026-27ನೇ ಸಾಲಿನಲ್ಲಿನ ಪ್ರವಾಸದ ಯೋಜನೆಗಳ ಬಗ್ಗೆ ಚರ್ಚೆಗೆ ತೆಗೆದುಕೊಳ್ಳಲಾಯಿತು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಪ್ರಸ್ತುತ ಸನ್ನಿವೇಶದ ವಿವಿಧ ವಿಷಯಗಳ ಬಗ್ಗೆಯೂ ಗಮನ ಹರಿಸಲಾಗಿದ್ದು, ಮುಖ್ಯವಾಗಿ ಜನಗಣತಿ ಸಂದರ್ಭದ ಮಾಹಿತಿ, ಜನಸಂಖ್ಯಾ ಅಸಮತೋಲನದಿಂದ ಎದುರಾಗುತ್ತಿರುವ ಸವಾಲುಗಳು, ಮಾಧಕ ವಸ್ತುಗಳ ಸೇವನೆಯ ದುಷ್ಪರಿಣಾಮ, ತಡೆಎಗಟ್ಟುವ ಪ್ರಯತ್ನ ಹಾಗೂ ಸಂತಶಿರೋಮಣಿ ರವಿದಾಸ ಮಹಾರಾಜರ 650ನೇ ಜನ್ಮ ಜಯಂತಿಯ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
***
ಈ ಲೇಖನ ಹಂಚಿಕೊಳ್ಳಿ