ಸರ್ಕಾರದ ಸೂಚನೆ ಬೆಳಗಾವಿ ಪಾಲಿಕೆ ಪಾಲಿಸದಿದ್ದರೆ ಸೂಪರ್ ಸೀಡ್ ಮಾಡಬಹುದು - ಸಚಿವರಿಗೆ ಕನ್ನಡ ಸಂಘಟನೆಗಳ ಮನವರಿಕೆ
ಜುಲೈ 8 ರಂದು ಮುಂಬೈಯಲ್ಲಿ ಅಲ್ಲಿಯ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಗಡಿವಿವಾದ ಸಂಬಂಧ ಉನ್ನತಾಧಿಕಾರ ಸಮಿತಿಯ ಸಭೆ ನಡೆಯಲಿದ್ದು, ಯಾವದೇ ಸಮಯದಲ್ಲಿ ಸುಪ್ರೀಂ ಕೋರ್ಟಿನ ಮುಂದೆ ಗಡಿವಿವಾದ ಪ್ರಕರಣ ವಿಚಾರಣೆಗೆ ಬರಬಹುದು. ಬೆಳಗಾವಿ ಪಾಲಿಕೆಯಲ್ಲಿ "ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ" ಎಂಬ ಗೊತ್ತುವಳಿ ಪಾಸಾದರೆ ಅದನ್ನು ಕರ್ನಾಟಕ ಪರವಾಗಿ ಕೋರ್ಟಿನಲ್ಲಿ ಸಲ್ಲಿಸಲು ಅವಕಾಶ ಸಿಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮುಖಂಡರು ವಿವರಿಸಿದ್ದಾರೆ.
ಅಸ್ಮಿತೆ ಸುದ್ದಿ : ಗಡಿವಿವಾದ ಪ್ರಕರಣ ರಾಜ್ಯದ ಹಿತಾಸಕ್ತಿ ದೃಷ್ಟಿಯಿಂದ ಮುಖ್ಯವಾಗಿದ್ದು, ಪಾಲಿಕೆಯಲ್ಲಿ ಬೆಳಗಾವಿ ಪರವಾದ ಗೊತ್ತುವಳಿ ಸ್ವೀಕಾರವು ಸಹ ಮಹತ್ವದ್ದಾಗಿದೆ.ರಾಜ್ಯ ಸರಕಾರ ನೀಡುವ ಸೂಚನೆಗಳನ್ನು ಬೆಳಗಾವಿ ಪಾಲಿಕೆಯು ಅನುಸರಿಸದಿದ್ದರೆ ಪಾಲಿಕೆಯನ್ನು ಕಿತ್ತು ಹಾಕಬಹುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕನ್ನಡಪರ ಸಂಘಟನೆಗಳ ಮುಖಂಡರು ಮನವರಿಕೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ,ನಗರ ಸೇವಕ ರಮೇಶ ಸೊಂಟಕ್ಕೆ,ಕನ್ನಡ ಮುಖಂಡ ಮಲ್ಲಪ್ಪ ಗುಡಗೇನಟ್ಟಿ,ಎಸ್.ಎಸ್.ಮೂಕನವರ ಅವರನ್ನು ಒಳಗೊಂಡ ನಿಯೋಗವೊಂದು ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವರನ್ನು ಖುದ್ದಾಗಿ ಕಂಡು, ಬೆಳಗಾವಿ ಪಾಲಿಕೆ ಗೊತ್ತುವಳಿ ಸ್ವೀಕರಿಸುವ ಹಿನ್ನೆಲೆಯಲ್ಲಿ ಆದ ಬೆಳವಣಿಗೆಯನ್ನು ಚರ್ಚಿಸಿ, ಪಾಲಿಕೆ ಬೆಳಗಾವಿ ಪರವಾಗಿ ನಿರ್ಧಾರಕ್ಕೆ ಬರದೇ ಹೋದರೆ ಸೂಪರ್ ಸೀಡ್ ಮಾಡಬಹುದು ಎಂದು ಸಲಹೆ ನೀಡಿದೆ ಎಂದು ಕನ್ನಡಪರ ಸಂಘಟನೆಗಳು ಮುಖಂಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ 8 ರಂದು ಮುಂಬೈಯಲ್ಲಿ ಅಲ್ಲಿಯ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಗಡಿವಿವಾದ ಸಂಬಂಧ ಉನ್ನತಾಧಿಕಾರ ಸಮಿತಿಯ ಸಭೆ ನಡೆಯಲಿದ್ದು, ಯಾವದೇ ಸಮಯದಲ್ಲಿ ಸುಪ್ರೀಂ ಕೋರ್ಟಿನ ಮುಂದೆ ಗಡಿವಿವಾದ ಪ್ರಕರಣ ವಿಚಾರಣೆಗೆ ಬರಬಹುದು. ಬೆಳಗಾವಿ ಪಾಲಿಕೆಯಲ್ಲಿ "ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ" ಎಂಬ ಗೊತ್ತುವಳಿ ಪಾಸಾದರೆ ಅದನ್ನು ಕರ್ನಾಟಕ ಪರವಾಗಿ ಕೋರ್ಟಿನಲ್ಲಿ ಸಲ್ಲಿಸಲು ಅವಕಾಶ ಸಿಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮುಖಂಡರು ವಿವರಿಸಿದ್ದಾರೆ.
ನಿಯೋಗದ ಜೊತೆಗೆ ನಡೆದ ಚರ್ಚೆಯ ನಂತರ ಸಚಿವರು ಪಾಲಿಕೆಯ ವಿಷಯವನ್ನು ತಾವು ಗಂಭೀರವಾಗಿ ಪರಿಗಣಿಸಿದ್ದು ಬೆಂಗಳೂರಿಗೆ ತೆರಳಿದ ನಂತರ ಸರಕಾರದ ಮಟ್ಟದಲ್ಲಿ ಇದನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸುವ ಸಂಬಂಧ ರಾಜ್ಯ ಸರಕಾರ ವರದಿ ಕೇಳಿದ್ದು ಈ ಬಗ್ಗೆ ಸೋಮವಾರ ಪೌರಾಡಳಿತ ನಿರ್ದೇಶನಾಲಯಕ್ಕೆ ವರದಿ ಸಲ್ಲಿಸುವದಾಗಿ ಬೆಳಗಾವಿ ಜಿಲ್ಲಾಧಿಕಾರಿ ಮೊಹ್ಮದ ರೋಷನ್ ಅವರು ಇಂದು ಸಚಿವ ಸತೀಶ ಜಾರಕಿಹೊಳಿ ಅವರಿಗೆ ತಿಳಿಸಿದ್ದಾರೆ ಎಂದು ಸಂಘಟನೆ ಮುಖಂಡರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ರಾಜ್ಯ ಸರಕಾರಕ್ಕೆ ಕಳಿಸುವ ವರದಿಯನ್ನು ಪರಿಶೀಲಿಸಿ ಬೆಂಗಳೂರಿಗೆ ನಿಯೋಗ ಒಯ್ದು ಸಚಿವ ಸತೀಶ್ ಜಾರಕಿಹೊಳಿ ಮತ್ತು ನಗರಾಭಿವೃದ್ಧಿ ಖಾತೆಯ ಸಚಿವರು,ಮುಖ್ಯ ಕಾರ್ಯದರ್ಶಿಗಳನ್ನು ಭೇಟಿಯಾಗಲು ಕನ್ನಡಪರ ಸಂಘಟನೆಗಳು ನಿರ್ಧರಿಸಿವೆ ಎಂದು ಹಿರಿಯ ಮುಖಂಡ ಅಶೋಕ ಚಂದರಗಿ ಮಾಹಿತಿ ನೀಡಿದ್ದಾರೆ.
****
ಈ ಲೇಖನ ಹಂಚಿಕೊಳ್ಳಿ