ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಮಳೆ: ಮೈದುಂಬಿ ಹರಿಯುತ್ತಿರುವ ನದಿಗಳು; ಕೆಳ ಹಂತದ ೭ ಸೇತುವೆಗಳು ಜಲಾವೃತ್ತ
೧೬ ಮನೆಗಳಿಗೆ ಭಾಗಶಃ ಹಾನಿಯಾಗಿದ್ದು ಎರಡು ಮನೆಗಳಿಗೆ ಪೂರ್ಣ ಪ್ರಮಾಣದ ಹಾನಿಯಾಗಿದೆ
ಅಸ್ಮಿತೆ ವರದಿ, ಜು.08: ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಮಹಾರಾಷ್ಟçದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವದರಿಂದ ಜಿಲ್ಲೆಯ ಕೃಷ್ಣೆ ಸೇರಿದಂತೆ ಅದರ ಉಪ ನದಿಗಳಾದ ವೇದಗಂಗಾ, ದೂಧಗಂಗಾ ಮೈದುಂಬಿ ಹರಿಯುತ್ತಿವೆ. ಈ ನದಿಗಳಿಗೆ ಒಂದು ಲಕ್ಷಕ್ಕೂ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರ ಪರಿಣಾಮ ಚಿಕ್ಕೋಡಿ ತಾಲೂಕಿನಲ್ಲಿರುವ ಕೆಳ ಹಂತದ ಏಳು ಸೇತುವೆಗಳು ಜಲಾವೃತ್ತಗೊಂಡಿವೆ. ಇದರಿಂದ ಉಂಟಾದ ಸಂಚಾರ ಅಡಚಣೆಗೆ ಜಿಲ್ಲಾ ಆಡಳಿತ ರ್ಯಾಯ ವ್ಯವಸ್ಥೆ ಕಲ್ಪಿಸಿದೆ. ಜಿಲ್ಲೆಯ ಘಟಪ್ರಭಾ ಹಾಗೂ ಇದರ ಉಪ ನದಿಗಳಾದ ಹಿರಣ್ಯಕೇಶಿ ಮತ್ತು ಮಾರ್ಕಂಡೇಯ ನದಿಗಳಲ್ಲಿ ನೀರಿನ ಪ್ರಮಾಣಾ ಹೆಚ್ಚಾಗುತ್ತಿದ್ದು, ಹಿಡಕಲ್ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಾಗುತ್ತಿದೆ.
ಬೆಳಗಾವಿ ಮತ್ತು ಖಾನಾಪೂರ ಪ್ರದೇಶದಲ್ಲಿಯೂ ನಿರಂತರ ಮಳೆಯಾಗುತ್ತಿದ್ದು, ಈ ಭಾಗದ ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ. ನಿರಂತರ ಮಳೆಯಿಂದಾಗಿ ಜನಜೀವನಕ್ಕೆ ತೊಂದರೆಯಾಗಿದ್ದು, ನಿನ್ನೆಯಿಂದ ಎರಡು ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಜಿಲ್ಲೆಯ ೧೫ ತಾಲೂಕುಗಳ ಪೈಕಿ ಸುಮಾರು ೧೦ ತಾಲೂಕುಗಳಲ್ಲಿ ಎರಡನೂರರಿಂದ ೪೦೦ ಮಿಲಿ ಮೀಟರ್ ಮಳೆಯಾಗಿದೆ. ಬೆಳೆಗಳಿಗೆ ಅನುಕೂಲವಾಗಿದೆ. ಸವದತ್ತಿ ಮತ್ತು ರಾಮದುರ್ಗ ತಾಲೂಕುಗಳಲ್ಲಿ ಮಳೆ ಪ್ರಮಾಣ ಕಡಿಮೆ ಇದೆ. ಮುಳಗಡೆಯಾದ ಸೇತುಗಳ ಸುತ್ತ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ೧೬ ಮನೆಗಳಿಗೆ ಭಾಗಶಃ ಹಾನಿಯಾಗಿದ್ದು ಎರಡು ಮನೆಗಳಿಗೆ ಪೂರ್ಣ ಪ್ರಮಾಣದ ಹಾನಿಯಾಗಿದೆ. ವಿವಿಧ ಮೂಲಗಳಿಂದ ಹರಿದುಬರುತ್ತಿರುವ ಒಂದು ಲಕ್ಷ ಕ್ಯೂಸೆಕ್ ನೀರು ವಿವಿಧ ಜಲಾಶಯಗಳಲ್ಲಿ ಸಂಗ್ರಹವಾಗುತ್ತಿದ್ದು, ಪ್ರಸ್ತುತ ಹಿಪ್ಪರಗಿ ಜಲಾಶಯದಲ್ಲಿ ೧.೭ ಟಿಎಂಸಿ ನೀರು ಸಂಗ್ರಹವಾಗಿದೆ. ಘಟಪ್ರಭಾ ನದಿಯಿಂದ ೨೫ ಕ್ಯೂಸೆಕ್ ಹಾಗೂ ಮಲಪ್ರಭಾ ನದಿಯಿಂದ ೧೩ ಸಾವಿರ ಕ್ಯೂಸೆಕ್ ನೀರಿನ ಹರಿವು ಇದೆ. ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ತೊಂದರೆಯಿಲ್ಲ. ಇನ್ನೆರಡು ದಿನ ಮಳೆಯಾಗುವ ಸಾಧ್ಯತೆಯಿದ್ದು, ಇದಕ್ಕಾಗಿ ನದಿ ತೀರದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಜಲಪಾತಗಳ ವೀಕ್ಷಣೆಗೆ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಲೇಖನ ಹಂಚಿಕೊಳ್ಳಿ